webnews kannada

ಮುಂಬೈನಲ್ಲಿ ತಪ್ಪಿದ ಮಹಾ ದುರಂತ: ಮೊಹರಂ ಮೆರವಣಿಗೆಯಲ್ಲಿ ವಿಷಕಾರಿ ಮಾತ್ರೆ ಹಂಚುತ್ತಿದ್ದ ವ್ಯಕ್ತಿಯ ಬಂಧನ!

ಮುಂಬೈ: ಕಳೆದ ಶುಕ್ರವಾರ (ಜೂನ್‌ 26) ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ, ವಿಷಕಾರಿ ಮಾತ್ರೆಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಾತ್ರೆಗಳನ್ನು ಸೇವಿಸಿದ ಸುಮಾರು ಒಂದು ಡಜನ್ ಜನರು ಅಸ್ವಸ್ಥರಾದ ಬಳಿಕ, ಬೈಕುಲ್ಲಾ ಪ್ರದೇಶದಲ್ಲಿ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕ್ಯಾಪ್ಸುಲ್‌ಗಳಲ್ಲಿ ಇಲಿ ವಿಷ ಮತ್ತು ಇತರ ಮಾರಕ ರಾಸಾಯನಿಕಗಳನ್ನು ಸೇರಿಸಲಾಗಿದ್ದು, ಆರೋಪಿ ಫಯಾಜ್‌ ಸುಮಾರು 15 ಸಾವಿರ ಜನರನ್ನು ಕೊಲ್ಲಲು ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ನ್ಯಾಯಾಲಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

“ರೇ ರಸ್ತೆಯ ರೆಹಮತಾಬಾದ್ ಸ್ಮಶಾನದ ಬಳಿ ಅಶುರಾ ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ, ಪ್ರೇಮ್‌ಜಿ ಈ ವಿಷಕಾರಿ ಮಾತ್ರೆಗಳನ್ನು ವಿತರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಜನಸಂದಣಿಯ ಲಾಭ ಪಡೆದು, ಅವುಗಳನ್ನು ನೋವು ನಿವಾರಕಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳೆಂದು ಹೇಳಿ ಮಾರಾಟ ಮಾಡುತ್ತಿದ್ದ. ಪೊಲೀಸರು ಸಕಾಲದಲ್ಲಿ ಆತನನ್ನು ಬಂಧಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ” ಎಂದು ಮುಂಬೈ ಪೊಲೀಸ್ ಡಿಸಿಪಿ (ಕೇಂದ್ರ ವಲಯ-I) ಜಯಂತ್ ಮೀನಾ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಮಾತ್ರೆಗಳನ್ನು ಸೇವಿಸಿದ ನಂತರ ಕನಿಷ್ಠ 11 ಜನರು ಅಸ್ವಸ್ಥರಾಗಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಅವರಲ್ಲಿ ಒಬ್ಬರಾದ ಸಲ್ಮಾನ್ ಸಯೀದ್, ಮಾತ್ರೆ ತೆಗೆದುಕೊಂಡ ನಂತರ ಹೊಟ್ಟೆ ನೋವು ಮತ್ತು ವಾಂತಿ ಉಂಟಾಗಿದೆ ಎಂದು ವರದಿ ಮಾಡಿದ್ದರು

ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸರು ಅವನ ಕ್ಯಾಪ್ಸುಲ್ ಸ್ಟಾಕ್ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡರು. ಇವುಗಳಲ್ಲಿ ಕನಿಷ್ಠ 14,900 ಮಾತ್ರೆಗಳು ಸೇರಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಆಗಲೇ ಗಣನೀಯ ಪ್ರಮಾಣದ ಮಾತ್ರೆಗಳನ್ನು ವಿತರಿಸಲಾಗಿತ್ತು.

ಆರೋಪಿ ಫಯಾಜ್‌ 30,000 ಖಾಲಿ ಕ್ಯಾಪ್ಸುಲ್‌ಗಳು ಮತ್ತು 50 ಕೆಜಿ ಫಾಸ್ಫರಸ್‌ಗೆ ಆರ್ಡರ್‌‌ ಮಾಡಿದ್ದ ಎಂದು ಡಿಸಿಪಿ ಮೀನಾ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಮೂವರು ಮಹಿಳಾ ಸ್ವಯಂಸೇವಕರ ಜಾಗರೂಕತೆಯಿಂದ ಸಾವಿರಾರು ಜೀವಗಳನ್ನು ಉಳಿಸಲಾಗಿದೆ. ಓರ್ವ ಮಹಿಳಾ ಸ್ವಯಂಸೇವಕಿ ಆರೋಪಿಯು ಅನುಚಿತ ಮತ್ತು ಅನುಮಾನಾಸ್ಪದ ರೀತಿಯಲ್ಲಿ ಮಾತ್ರೆಗಳನ್ನು ವಿತರಿಸುತ್ತಿರುವುದನ್ನು ಗಮನಿಸಿದರು. ಸ್ವಯಂಸೇವಕರು ತಕ್ಷಣ ಅವನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದರು. ಮಾತ್ರೆ ಸೇವಿಸದಂತೆ ಜನರನ್ನು ಕೇಳುತ್ತಾ ಧ್ವನಿವರ್ಧಕವನ್ನು ಬಳಸಿ ಘೋಷಣೆ ಮಾಡಲಾಯಿತು.

Leave a Reply

Your email address will not be published. Required fields are marked *