ಕರಾವಳಿ

ಕೊಲ್ಲೂರು ವನ್ಯಜೀವಿ ವಲಯದ ಮೇಗಿನಿ ವ್ಯಾಲಿ ಮೀಸಲು ಅರಣ್ಯದಲ್ಲಿ ಹೊಸ ಪ್ರಭೇದದ ಸಿಹಿನೀರಿನ ಏಡಿಯೊಂದು ಪತ್ತೆ

ಕುಂದಾಪುರ: ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಕೊಲ್ಲೂರು ಸಮೀಪದ ಮೇಗಿನಿ ವ್ಯಾಲಿ ಮೀಸಲು ಅರಣ್ಯದಲ್ಲಿ ಹೊಸ ಪ್ರಭೇದದ ಸಿಹಿನೀರಿನ ಏಡಿ ಪತ್ತೆಯಾಗಿದೆ.

ಪಶ್ಚಿಮಘಟ್ಟಕ್ಕೆ ಮಾತ್ರ ಸೀಮಿತವಾದ ಸ್ಥಳೀಯವಾಗಿ ಮಾತ್ರ ಕಂಡು ಬರುವ(ಎಂಡಮಿಕ್) ಪ್ರಭೇದವನ್ನು ಸ್ಥಳೀಯ ಗಸ್ತು ಅರಣ್ಯ ಪಾಲಕ ಅಜೀರ್ ಕೆ. ಪತ್ತೆ ಹಚ್ಚಿದ್ದು ಅದಕ್ಕೆ ಘಟಿಯಾನಾ ಕರ್ನಾಟಕ ಎಂಬುದಾಗಿ ವೈಜ್ಞಾನಿಕ ಹೆಸರನ್ನು ಇಡಲಾಗಿದೆ. ಸಾಮಾನ್ಯವಾಗಿ ‘ಕರ್ನಾಟಕ ಘಾಟ್ ಏಡಿ’ ಎಂದು ಇದನ್ನು ಕರೆಯಲಾಗುತ್ತದೆ.

ಈ ಏಡಿಯ ಪ್ರಭೇದವು ಕೊಲ್ಲೂರು ವನ್ಯಜೀವಿ ವಲಯದ ಮೇಗಿನಿ ವ್ಯಾಲಿ, ಮಾದಿಬರೆ, ಮುರ್ಕೊಡಿ ಹೊಲ, ಗುಂಡಲಬೇರು, ಕೊರತಿಕಲ್ ಬರೆ, ಕೊರಕೊಪ್ಪದ ಹೊಲ, ಜನ್ನಲಾಣೆ, ಅಬ್ಬಿಗುಡ್ಡೆ ಹಾಗೂ ಚಿತ್ತೂರು ಮೀಸಲು ಅರಣ್ಯ ಪ್ರದೇಶದ ಸುತ್ತಮುತ್ತಲಿನ 35 ಕಿ.ಮೀ ವ್ಯಾಪ್ತಿಯಲ್ಲಿ ಕಂಡುಬರುತ್ತದೆ. ಸಮುದ್ರ ಮಟ್ಟದಿಂದ ಸುಮಾರು 60ರಿಂದ 250 ಮೀ. ಎತ್ತರದಲ್ಲಿ ಕಾಣ ಸಿಗುತ್ತದೆ. ರಾಜ್ಯಕ್ಕೆ ಗೌರವ ಸಮರ್ಪಿಸುವ ಉದ್ದೇಶ ದಿಂದಾಗಿ ಈ ಹೊಸ ಏಡಿ ಪ್ರಭೇದಕ್ಕೆ ‘ಘಾಟಿಯಾನ ಕರ್ನಾಟಕ’ ಎಂಬ ಹೆಸರು ನೀಡಲಾಗಿದೆ. ಈ ಪಡಿಯನ್ನು

ಸ್ಥಳೀಯವಾಗಿ ‘ಮಳೆ ಏಡಿ’ ಕರೆಯಲಾಗುತ್ತದೆ. ಬೇಸಿಗೆಯಲ್ಲೂ ಪತ್ತೆ: ಹೊಸ ಪ್ರಭೇದದ ಗಂಡು ಏಡಿ

ಗಾಢ ನೇರಳೆ ಬಣ್ಣ ಮತ್ತು ಮುಂಭಾಗ ತಿಳಿ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಏಡಿ ಬೂದು, ನೇರಳೆ ಹಾಗೂ ಗಾಢ ಬೂದು, ಕಂದು ಬಣ್ಣಗಳ ಮಿಶ್ರಣದಿಂದ

ಕೂಡಿರುತ್ತದೆ. ಇವು ಮಳೆಗಾಲದಲ್ಲಿ ಸಂತಾ ನೋತ್ಪತ್ತಿ ನಡೆಸುತ್ತವೆ. ಇವು ಮರದ ಪೊಟರೆ ಮತ್ತು ಜಂಬಿಟ್ಟಿಗೆ (ಲ್ಯಾಟರೈಟ್) ಬಂಡೆಗಳ ನೀರು ತುಂಬಿದ ರಂಧ್ರಗಳಲ್ಲಿ ವಾಸಿಸುತ್ತವೆ. ಈ ಏಡಿಗಳು ಬೇಸಿಗೆಯಲ್ಲಿ ಯೂ ಕಂಡು ಬರುತ್ತದೆ. ಯಾಕೆಂದರೆ ಇವುಗಳ ಆವಾಸ ಸ್ಥಾನ ನಿತ್ಯ ಹರಿದ್ವರ್ಣ ಮತ್ತು ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿರು ವುದರಿಂದ, ಬೇಸಿಗೆಯಲ್ಲಿಯೂ ತೇವಾಂಶದ ಪ್ರಮಾಣವು ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ.

ಅಲ್ಲದೆ ಮಾವಿನಕಾರು, ಜಡ್ಡಲ್ ಮತ್ತು ಸೌಪರ್ಣಿಕಾ ನದಿಗಳು ವರ್ಷದ ಹಲವು ತಿಂಗಳು ಹರಿಯುವುದರಿಂದ ಮರಗಳ ರಂಧ್ರಗಳು ಹಾಗೂ ಇತರ ನೈಸರ್ಗಿಕ ಕುಳಿಗಳಲ್ಲಿ ಬೇಸಿಗೆಯ ಅವಧಿಯಲ್ಲಿಯೂ ನೀರು ಸಂಗ್ರಹವಾಗಿರು ತ್ತದೆ. ಈ ನೀರಿನಿಂದ ಕೂಡಿದ ರಂಧ್ರಗಳು ಮತ್ತು ಕುಳಿಗಳು

ಏಡಿಗಳಿಗೆ ಅನುಕೂಲಕರವಾದ ಅವಾಸಸ್ಥಾನವಾಗಿದೆ.

ಎಂಟನೇ ಪ್ರಭೇದ: ಭಾರತದ ಪಶ್ಚಿಮಘಟ್ಟಗಳಲ್ಲಿ ಈವರೆಗೆ ಒಟ್ಟು 14 ಬಗೆಯ ಘಟಿಯಾನ ಏಡಿ ಪ್ರಭೇದಗಳನ್ನು ಪತ್ತೆ ಮಾಡಲಾಗಿದೆ. ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಈವರೆಗೆ ಏಳು ಘಟಿಯಾನ ಪ್ರಭೇದದ ಏಡಿಗಳು ಪತ್ತೆಯಾಗಿವೆ. ಇದೀಗ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಘಟಿಯಾನಾ ಕರ್ನಾಟಕ ಎಂಟನೇ ಪ್ರಭೇದ ಇದಾಗಿದೆ ಎಂದು ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ ಸಂಸ್ಥೆಯು – ದೃಢಪಡಿಸಿದೆ.

Leave a Reply

Your email address will not be published. Required fields are marked *