ಅಸ್ತಮಾ ಸಮಸ್ಯೆ: ನಿರಂತರ ಕೆಮ್ಮುತ್ತಿದ್ದ ವ್ಯಕ್ತಿ ಮೇಲೆ ನೆರೆಮನೆಯವರ ಹಲ್ಲೆ, ಸಾವು

ಬೆಂಗಳೂರು: ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಜೋರಾಗಿ ಕೆಮ್ಮಿದ್ದಕ್ಕೆ ನೆರೆಮನೆಯವರು ಜಗಳಕ್ಕಿಳಿದು ಹಲ್ಲೆ ನಡೆಸಿದ್ದು, ಪರಿಣಾಮ ಉಸಿರಾಟ ಸಮಸ್ಯೆಯಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆಯೊಂದು ಬೆಂಗಳೂರಿನ ಹೊರವಲಯದ ಬಿಡದಿ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ವಿನೋದ್ ಕುಮಾರ್ ಶೈನೀ (34) ಎಂದು ಗುರುತಿಸಲಾಗಿದೆ. ಇವರು ರಾಜಸ್ಥಾನ ಮೂಲದವರಾಗಿದ್ದು, ಬಿಡದಿ ತಾಲೂಕಿನ ಕೆತಗಾನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು. ಖಾಸಗಿ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.

ಫೆಬ್ರವರಿ 7ರಂದು ಸಂಜೆ ವಿನೋದ್ ಕುಮಾರ್ ಜೋರಾಗಿ ಕೆಮ್ಮುತ್ತಿದ್ದಾಗ ನೆರೆಹೊರೆಯವರು ಜಗಳಕ್ಕೆ ಇಳಿದಿದ್ದಾರೆ. ಮಾತಿನ ಚಕಮಕಿ ವಾಗ್ವಾದವಾಗಿ ತಿರುಗಿ, ಆತನನ್ನು ತಳ್ಳಿಹಾಕಿ ಹಲ್ಲೆ ನಡೆಸಲಾಗಿದೆ. ಈ ವೇಳೆ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತೀವ್ರ ಉಸಿರಾಟ ಸಮಸ್ಯೆ ಎದುರಾಗಿದೆ.

ಕೂಡಲೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವೇ ತಿಳಿಯಲಿದೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) ಅಡಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *